Monday, August 27, 2012

Bank Loans for Higher Education - Article in Vijaya Karnataka 27 Aug 2012

vijaya karnataka
27 Aug 2012,18:49

 ಶಿಕ್ಷಣ-ಕ್ಯಾಂಪಸ್


 
 
http://vijaykarnataka.indiatimes.com/articleshow/15829099.cms

  ಸಾಲವದು 

 

ಶೂಲವಾಗಬಾರದಯ್ಯಾ

 


0
ಸಾಲವದು ಶೂಲವಾಗಬಾರದಯ್ಯಾ
* ಯಾಜ್ಞವಲ್ಕ್ಯ
ದೇಶದದ ಎಲ್ಲಾ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಸರಕಾರದ ವಿವಿಧ ಹಣಕಾಸು ನಿಗಮ/ಪ್ರಾಕಾರಗಳು ಉನ್ನತ ಶಿಕ್ಷಣ ಮತ್ತು ವೃತ್ತಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಕಾಲೇಜಿಗೆ ಪಾವತಿಸಬೇಕಾಗಿರುವ ಶುಲ್ಕ, ಪಠ್ಯ ಪುಸ್ತಕ, ಕಂಪ್ಯೂಟರ್/ಲ್ಯಾಪ್‌ಟಾಪ್ ವೆಚ್ಚ, ಹಾಸ್ಟೆಲ್ ವೆಚ್ಚ, ಹೆಚ್ಚಿನ ತರಬೇತಿಗೆ ನೀಡುವ ವೆಚ್ಚ ಎಲ್ಲವೂ ಸೇರಿರುತ್ತದೆ. ವಿದೇಶಗಳಲ್ಲಿ ಓದ ಬಯಸುವ ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚ ಮತ್ತು ಭದ್ರತಾ ಠೇವಣಿಯ ಗ್ಯಾರಂಟಿ ನೀಡುವ ಬ್ಯಾಂಕ್‌ಗಳು ಇವೆ. ಇತ್ತೀಚೆಗೆ ವಿದೇಶಿ ಬ್ಯಾಂಕ್‌ಗಳು ವಿದ್ಯಾಭ್ಯಾಸಕ್ಕೆ ಸಾಲ ನೀಡುವತ್ತ ಒಲವು ತೋರಿಸುತ್ತಿವೆ.

ಕನಿಷ್ಟ 10 ಸಾವಿರದಿಂದ ಗರಿಷ್ಟ 25 ಲಕ್ಷಗಳವರೆಗೆ ಲಭ್ಯವಿರುವ ಈ ಸಾಲ ಸೌಲಭ್ಯವನ್ನು ಬಳಸಿಕೊಳ್ಳಲು ವಿವಿಧ ಬ್ಯಾಂಕ್‌ಳು ಬೇರೆಬೇರೆ ಶರತ್ತುಗಳನ್ನು ವಿಧಿಸಿವೆ. ಸಾಮಾನ್ಯವಾಗಿ ಕಡಿಮೆ ಮೊತ್ತದ ಸಾಲಕ್ಕೆ ಜಮೀನು, ಆಸ್ತಿ, ವಿಮೆ ಭದ್ರತೆ ಕೇಳುವಂತಿಲ್ಲವಾದರೂ ಐದು ಲಕ್ಷ ರೂಪಾಯಿಗಳ ಮೇಲ್ಪಟ್ಟ ಮೊತ್ತಕ್ಕೆ ಎಲ್ಲ ರೀತಿಯ ಭದ್ರತೆ ಒದಗಿಸಬೇಕಾಗುತ್ತದೆ. ಬಡ್ಡಿ ದರವೂ ಕೂಡ ಶೇ 6ರಿಂದ ಶೇ 15ರವರೆಗೆ ಇರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಶೈಕ್ಷಣಿಕ ಸಾಲ ಪಡೆಯುವುದು ಜಾಣತನ.

ರಾಜ್ಯದಲ್ಲಿ ಹೀಗಿದೆ ಬಡ್ಡಿದರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಆಯ್ಕೆ ಮಾಡಿಕೊಂಡು ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಮೆಡಿಕಲ್, ಡೆಂಟಲ್, ಭಾರತೀಯ ಔಷಧ ಪದ್ಧತಿ ಮತ್ತು ಹೋಮಿಯೋಪತಿ ಕೋರ್ಸ್‌ಗಳಿಗೆ ಸೇರಿದ ವಿದ್ಯಾರ್ಥಿಗಳು ಐದು ಲಕ್ಷ ರೂಪಾಯಿಗಳವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಶೈಕ್ಷಣಿಕ ಸಾಲ ಸೌಲಭ್ಯ ಪಡೆದುಕೊಂಡಲ್ಲಿ ಅಂತಹ ವಿದ್ಯಾರ್ಥಿಗಳು ಶೇ 6 ಬಡ್ಡಿಯನ್ನು ಪಾವತಿ ಮಾಡಿದರೆ ಸಾಕು. ಬ್ಯಾಂಕ್ ವಿಧಿಸುವ, ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಸರ್ಕಾರವು ಪರೀಕ್ಷಾ ಪ್ರಾಧಿಕಾರದ ಮೂಲಕ ನೇರವಾಗಿ ಬ್ಯಾಂಕ್‌ಗಳಿಗೆ ಪಾವತಿ ಮಾಡುತ್ತದೆ. ಈ ಸೌಲಭ್ಯ ಶೈಕ್ಷಣಿಕ ಅವ ಮುಗಿಯುವವರೆಗೂ ವಿದ್ಯಾರ್ಥಿಗೆ ಲಭಿಸುತ್ತದೆ. ಈ ರೀತಿ ಇಳಿಕೆ ಬಡ್ಡಿದರ ಕಳೆದ ಕೆಲವು ವರ್ಷಗಳಿಂದ ಜಾರಿಯಲ್ಲಿದ್ದು ಅನೇಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. 

ಕೇಂದ್ರ ಪುರಸ್ಕೃತ ಬಡ್ಡಿ ಮಾಫಿ ಯೋಜನೆ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2009 ರ ಏಪ್ರಿಲ್ 1ರ ನಂತರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆಯಲಾದ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿಯನ್ನು ಮಾಫಿ ಮಾಡುವ ಯೋಜನೆಯನ್ನು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮೂಲಕ ಜಾರಿಗೊಳಿಸಿದ್ದು ಕೆನರಾ ಬ್ಯಾಂಕ್ ಅನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಿದೆ. 4.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗಿದ್ದು ಸಾಲ ಪಡೆಯುವ ಅವ ಮುಗಿದ ನಂತರ ಒಂದು ವರ್ಷ ಅಥವಾ ಕೆಲಸ ಸಿಕ್ಕ ಆರು ತಿಂಗಳ ಒಳಗಾಗಿ ಮರುಪಾವತಿ ಆರಂಭಿಸುವವರೆಗೆ ಮಾತ್ರ ಈ ಬಡ್ಡಿ ಮಾಫಿ ಯೋಜನೆ ಜಾರಿಯಲ್ಲಿರುತ್ತದೆ. 

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
www.education.nic.in/uhe/intSubsidyonELS.pdf
www.iba.org.in
www.allahabadbank.com
www.andhrabank.com
www,bankofbaroda.com
www.bankofindia.com
www.bankofmaharastra.com
www.canarabank.com
www.centralbankofindia.com
www.corpbank.com
www.denabank.com
www.indianbank.com
www.iob.com
www.iob.in

ಸಾಲ ಸೌಲಭ್ಯ
ಬ್ಯಾಂಕ್‌ಗಳಂತೆಯೇ ಶೈಕ್ಷಣಿಕ ಸಾಲ ನೀಡುವಲ್ಲಿ ನ್ಯಾಷನಲ್ ಮೈನಾರಿಟೀಸ್ ಡೆವಲಪ್‌ಮೆಂಟ್ ಅಂಡ್ ಫೈನಾನ್ಸ್ ಕಾರ್ಪೊರೇಷನ್ (NMDFC), ನ್ಯಾಷನಲ್ ಸಫಾಯಿ ಕರ್ಮಚಾರಿ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NSKFDC), ನ್ಯಾಷನಲ್ ಬ್ಯಾಕ್‌ವರ್ಡ್ ಕ್ಲಾಸಸ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NBCFDC), ನ್ಯಾಷನಲ್ ಶೆಡ್ಯೂಲ್ ಕ್ಯಾಸ್ಟ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NSCFDC), ನ್ಯಾಷನಲ್ ಹ್ಯಾಂಡಿಕ್ಯಾಪ್ಡ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NHFDC) ಮೊದಲಾದ ಪ್ರಾಧಿಕಾರಗಳಿಂದಲೂ ಶೈಕ್ಷಣಿಕ ಸಾಲ ಸೌಲಭ್ಯ ವಿಸ್ತರಿಸಲಾಗುತ್ತಿದೆ. ವಿದೇಶಗಳಲ್ಲಿ ವ್ಯಾಸಂಗ ಮಾಡಲು ಆಸಕ್ತಿ ಇರುವವರಿಗೆ ವಿಶೇಷ ಆದ್ಯತೆ ಇದ್ದು ನಿಗದಿತ ಸಮಯದಲ್ಲಿ ಪಾವತಿ ಮಾಡುವ ಸಾಲಕ್ಕೆ ಸಬ್ಸಿಡಿ ಸೌಲಭ್ಯ ಲಭಿಸುವ ಸಾಧ್ಯತೆಗಳಿವೆ ಮತ್ತು ಬಡ್ಡಿ ದರದಲ್ಲಿಯೂ ಕಡಿತ ಮಾಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ :
www.nmdfc.org
www.nskfdc.nic.in
www.mpbcmfdc.nic.in
www.nbcfdc.org.in/sca_list_add_a/html
www.nsfdc.nic.in


ಸಾಲವೆಂದರೆ ಶೂಲ?
ಸುಲಭ ಶೈಕ್ಷಣಿಕ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಬ್ಯಾಂಕ್‌ಗಳಿಗೆ ಹೋದಾಗಲೇ ಅಲ್ಲಿನ ಗಂಟುಮುಖದ ಸೇವೆಯ ಪರಿಚಯ ಲಭ್ಯವಾಗುವುದು. ಅನೇಕ ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳ ನೌಕರರು ತಮ್ಮ ಮಕ್ಕಳ ಬ್ಯಾಂಕ್‌ಲೋನ್ ಪಾವತಿಯ ಮೇಲೆ ಸಿಗುವ ನಿರ್ದಿಷ್ಟ ಮೊತ್ತದ ಆದಾಯ ತೆರಿಗೆ ಉಳಿತಾಯದ ಸೌಲಭ್ಯಕ್ಕಾಗಿ ಶೈಕ್ಷಣಿಕ ಸಾಲ ತೆಗೆಯಲು ಮುಂದಾಗಿ ಸುಲಭವಾಗಿ ತೆಗೆದುಕೊಂಡೇ ಬಿಡುತ್ತಾರೆ. ಮೊದಲೇ ಬಡತನದ ಹಿನ್ನೆಲೆ, ಬ್ಯಾಂಕ್‌ನಲ್ಲಿ ಅಕೌಂಟ್ ಕೂಡ ತೆರೆಯಲು ಸಾಧ್ಯವಾಗದ ಹಳ್ಳಿಗಾಡಿನ ಮುಗ್ಧ ಮಂದಿ, ಬಡ ವಿದ್ಯಾರ್ಥಿಗಳು ಸಾಲ ಮಂಜೂರಾತಿಗಾಗಿ ಅದೆಷ್ಟು ದಿನಗಳನ್ನು ಬ್ಯಾಂಕಿನ ಬಾಗಿಲು ತಟ್ಟುತ್ತಾ ಕಳೆದು, ತರಗತಿಗಳಿಗೆ ಚಕ್ಕರ್ ಹಾಕಿದರೂ ಬ್ಯಾಂಕಿಗೆ ನಿಗದಿತ ದಾಖಲೆಗಳನ್ನು, ಶ್ಯೂರಿಟಿಯನ್ನು ಒದಗಿಸಲಾಗದೆ, ಕೆಲವೊಮ್ಮೆ ಇತರೆ ಬ್ಯಾಂಕುಗಳಿಂದ ನೋ ಡ್ಯೂಸ್ ಸರ್ಟಿಫಿಕೇಟ್‌ಗೆ ಶುಲ್ಕ ಪಾವತಿ ಮಾಡಲಾಗದೇ ನಿರಾಶೆಯಿಂದ ಹಿಂದಿರುಗುತ್ತಿರುವ ಸಹಸ್ರಾರು ವಿದ್ಯಾರ್ಥಿಗಳೂ ಇದ್ದಾರೆ. ಇದ್ದವರಿಗಷ್ಟೇ ಈ ಸೌಲಭ್ಯ ಎಂಬ ಭಾವನೆಯೂ ಬಲಿಯುತ್ತಿದೆ. ಶಿಫಾರಸ್ಸು ಇರುವವರು, ಒಳ್ಳೆಯ ಮಾರ್ಕ್ಸ್ ಇದ್ದು ಪ್ರತಿಷ್ಠಿತ ಕಾಲೇಜು ಸೇರಿದವರಿಗೆ ಸ್ವಲ್ಪ ರಿಲ್ಯಾಕ್ಸೇಷನ್ ಇದೆ ಅನ್ನಿಸುತ್ತದೆ.

ಎಚ್ಚರ ಎಚ್ಚರ!
ಸಾಲ ಪಡೆದು, ಶಿಕ್ಷಣ ಮುಗಿಸಿ, ನಿರುದ್ಯೋಗ ಪರ್ವದಲ್ಲಿ ತೊಳಲಾಡುತ್ತ, ಮರುಪಾವತಿ ಸಾಧ್ಯವಾಗದೇ ನಾಲ್ಕೈದು ವರ್ಷ ಕಳೆದರಂತೂ ಮುಗಿದೇ ಹೋಯಿತು, ಸಾಲ ದುಪ್ಪಟ್ಟಾಗಿ ಆಗಿ ಶೂಲವಾಗುತ್ತದೆ. ಮೂರು ಮೂರು ತಿಂಗಳಿಗೊಂದರಂತೆ ಅಡಿಷನಲ್ ಛಾರ್ಜಸ್ ಸೇರುತ್ತಲೇ ಹೋಗುತ್ತದೆ. ಪ್ರತಿ ತಿಂಗಳ ವಿವರವನ್ನು ತೆಗೆಸಿದಾಗ ಮಾತ್ರ ಇದು ಗೋಚರವಾಗುತ್ತದೆ. ಸಾಲ ತೆಗೆದುಕೊಳ್ಳುವ ಮುನ್ನ ಮುಂದೊಂದು ದಿನ ಅದನ್ನು ಪಾವತಿ ಮಾಡುವ ಸಾಧ್ಯತೆ, ಕನಿಷ್ಟ ಬಡ್ಡಿಯ ಮೊತ್ತವನ್ನಾದರೂ ಪ್ರತಿ ತಿಂಗಳೂ ತೀರಿಸುತ್ತಾ ಬರುವ ಅನಿವಾರ್ಯತೆಯನ್ನು ಒಪ್ಪಿಕೊಂಡು ತೆಗೆದುಕೊಳ್ಳುವುದು ಒಳ್ಳೆಯದು.
Bank Loans for Higher Education - Article in Vijaya Karnataka 27 Aug 2012

Monday, August 13, 2012

NTSE and NMMS Examinations 2012 in Prajavani 13 Aug 12

 http://prajavaniepaper.com/svww_index1.php
Article on NTSE and NMMS Examinations 2012 in Prajavani 13 Aug 12

ಪ್ರತಿಭಾ ವೇತನ ಪರೀಕ್ಷೆಗೆ ಸಿದ್ಧರಾಗಿ ಮಕ್ಕಳೇ...

  • August 13, 2012


10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ (ಎನ್‌ಟಿಎಸ್‌ಇ) ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾ ಶಿಷ್ಯವೇತನ (ಎನ್‌ಎಂಎಂಎಸ್) ಪರೀಕ್ಷೆಗಳು ಮತ್ತೆ ಬಂದಿವೆ.

 ಕರ್ನಾಟಕಕ್ಕೆ ಎನ್‌ಎಂಎಂಎಸ್ ಅಡಿಯಲ್ಲಿ 5,534 ವಿದ್ಯಾರ್ಥಿ ವೇತನಗಳು ಮೀಸಲಾಗಿದ್ದರೂ ಪ್ರತಿ ವರ್ಷ 2-3 ಸಾವಿರ ಮಕ್ಕಳು ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಈ ಪರೀಕ್ಷೆ ತೆಗೆದುಕೊಳ್ಳುತ್ತಿರುವುದು ಇದಕ್ಕೆ ಕಾರಣ. ಆದ್ದರಿಂದ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಪ್ರತಿ ಶಾಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಮಾಡಲು ಸರ್ಕಾರ ಬಿಇಒಗಳಿಗೆ ಸೂಚಿಸಿದೆ. 

ಅದರಲ್ಲೂ ಹಿಂದುಳಿದ ತಾಲ್ಲೂಕುಗಳು ಮತ್ತು ಎನ್‌ಪಿಇಜಿಇಎಲ್ ಯೋಜನೆಯ ಅನ್ವಯ ಹೆಣ್ಣುಮಕ್ಕಳಿಗೆ ವಿಶೇಷ ಶಿಕ್ಷಣ ನೀಡುತ್ತಿರುವ ಬ್ಲಾಕ್‌ಗಳಲ್ಲಿ ಎನ್‌ಎಂಎಂಎಸ್ ಪರೀಕ್ಷೆಗಾಗಿಯೇ ಪ್ರತ್ಯೇಕ ತರಬೇತಿ, ವಿಶೇಷ ತರಗತಿ ನಡೆಸಲು ಆದೇಶಿಸಿದೆ.

ಅರ್ಜಿ ನಮೂನೆಗಳು www.dsert.kar.nic.in ವೆಬ್‌ಸೈಟ್‌ನಲ್ಲೂ ಲಭ್ಯ. ಭರ್ತಿ ಮಾಡಿದ ಅರ್ಜಿಗಳನ್ನು ಆ. 31ರ ಒಳಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಎರಡೂ ಪರೀಕ್ಷೆ ನವೆಂಬರ್ 18ರಂದು ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿವೆ.

ಪರೀಕ್ಷಾ ಶುಲ್ಕ: ಎನ್‌ಟಿಎಸ್‌ಇ ಪರೀಕ್ಷೆಗಾಗಿ ಸಾಮಾನ್ಯ ಮತ್ತು ಇತರೆ ವರ್ಗದ ವಿದ್ಯಾರ್ಥಿಗಳಿಗೆ 100 ರೂ, ಪರಿಶಿಷ್ಟ ಜಾತಿ, ವರ್ಗಕ್ಕೆ 25 ರೂ ಶುಲ್ಕ.

ಎನ್‌ಎಂಎಂಎಸ್‌ಗೆ ಅರ್ಜಿ ಶುಲ್ಕ ಅಥವಾ ಪರೀಕ್ಷಾ ಶುಲ್ಕ ಇಲ್ಲ. 7ನೇ ತರಗತಿಯಲ್ಲಿ ಕನಿಷ್ಠ ಶೇ 55 ಅಂಕ ಗಳಿಸಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಪೋಷಕರ ವರಮಾನ 1.5 ಲಕ್ಷ ಮೀರಿರಬಾರದು.

ವಿದ್ಯಾರ್ಥಿ ವೇತನ
ಎನ್‌ಟಿಎಸ್‌ಇ ಪರೀಕ್ಷೆಯ ಪ್ರಥಮ ಹಂತದಲ್ಲಿ ಮಾತ್ರ ತೇರ್ಗಡೆಯಾಗಿ ದ್ವಿತೀಯ ಹಂತದಲ್ಲಿ ಆಯ್ಕೆಯಾಗದೇ ಇರುವವರಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಎರಡು ವರ್ಷ ತಿಂಗಳಿಗೆ ರೂ.200 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಎರಡನೇ ಹಂತ ಹಾಗೂ ಸಂದರ್ಶನ ಹಂತದಲ್ಲಿ ಆಯ್ಕೆಯಾದರೆ ಪದವಿ ಮತ್ತು ಸ್ನಾತಕೋತ್ತರ ಹಂತದ ವರೆಗೂ ತಿಂಗಳಿಗೆ 500 ರೂ ವಿದ್ಯಾರ್ಥಿ ವೇತನ ದೊರೆಯುತ್ತದೆ. 
ಎನ್‌ಎಂಎಂಎಸ್ ತೇರ್ಗಡೆಯಾದರೆ 9ನೇ ತರಗತಿಯಿಂದ ಪ್ರಾರಂಭಿಸಿ ದ್ವಿತೀಯ ಪಿಯು ವರೆಗೂ ತಿಂಗಳಿಗೆ 500 ರೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಹೀಗಿರುತ್ತದೆ ಪ್ರಶ್ನೆಪತ್ರಿಕೆ
ಎನ್‌ಎಂಎಂಎಸ್‌ನ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯಲ್ಲಿ 90 ಅಂಕಗಳ 90 ಕಡ್ಡಾಯ ಪ್ರಶ್ನೆಗಳಿದ್ದು 90 ನಿಮಿಷ ಕಾಲಾವಕಾಶ ಇರುತ್ತದೆ. ಇದರಲ್ಲಿ ಸಾಮಾನ್ಯ ಗಣಿತ, ದಿಕ್ಕುಗಳನ್ನು ಗುರುತಿಸುವುದು, ರಕ್ತಸಂಬಂಧಗಳನ್ನು ಹುಡುಕುವುದು, ಬಿಟ್ಟ ಸಂಖ್ಯಾಸರಣಿ, ಅಕ್ಷರ ಸರಣಿಯನ್ನು ಪೂರ್ಣಗೊಳಿಸುವುದು, ತರ್ಕದ ಆಧಾರದಿಂದ ಲೆಕ್ಕ ಬಿಡಿಸುವುದು ಹೀಗೆ ಹಲವು ಬೌದ್ಧಿಕ ಕಸರತ್ತಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ.    
       
ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಯಲ್ಲೂ 90 ಅಂಕಗಳ 90 ಕಡ್ಡಾಯ ಪ್ರಶ್ನೆಗಳನ್ನು 90 ನಿಮಿಷಗಳಲ್ಲಿ ಉತ್ತರಿಸಬೇಕು. ಇದರಲ್ಲಿ ಇತಿಹಾಸ, ಭೂಗೋಳ, ಪೌರನೀತಿ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದು, 7ನೇ ತರಗತಿಯ ಪೂರ್ಣ ಹಾಗೂ 8 ನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆ ವರೆಗಿನ ಪಠ್ಯವಸ್ತು ನಿಗದಿಯಾಗಿರುತ್ತದೆ.

ಅರ್ಹತೆ ಗಳಿಸಿಕೊಳ್ಳಲು ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಮಕ್ಕಳು ಕನಿಷ್ಠ ಶೇ 40, ಪರಿಶಿಷ್ಟ ವಿದ್ಯಾರ್ಥಿಗಳು ಶೇ 32 ಅಂಕ ಪಡೆಯಬೇಕು. 

ಎನ್‌ಟಿಎಸ್‌ಸಿಗೆ 8-9ನೇ ತರಗತಿಯ ಪೂರ್ಣ ಹಾಗೂ 10ನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆ ವರೆಗಿನ ಪಠ್ಯವಸ್ತುವಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪ್ರಶ್ನೆಗೆ ನಾಲ್ಕು ಸಂಭಾವ್ಯ ಉತ್ತರಗಳಿದ್ದು ಅದರಲ್ಲಿ ಒಂದು ಸರಿ ಉತ್ತರವನ್ನು ಒಎಂಆರ್ ಷೀಟ್‌ನಲ್ಲಿಯೇ ನೀಲಿ ಅಥವಾ ಕಪ್ಪು ಬಾಲ್‌ಪಾಯಿಂಟ್ ಪೆನ್ನಿನಿಂದ ಸರಿಯಾಗಿ ತುಂಬಿಸಬೇಕು. 

ಪರೀಕ್ಷಾ ಕೈಪಿಡಿ
ಕರ್ನಾಟಕ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು (ಡಿಎಸ್‌ಇಆರ್‌ಟಿ) ಈ ಎರಡೂ ಪರೀಕ್ಷಾರ್ಥಿಗಳ ಅನುಕೂಲಕ್ಕೆ ವಿಶೇಷ ಮಾಹಿತಿ ಪುಸ್ತಕವನ್ನು ಕಳೆದ ವರ್ಷವೇ ಬಿಡುಗಡೆ ಮಾಡಿತ್ತು. ಇದು ಡಿಎಸ್‌ಇಆರ್‌ಟಿ (http://dsert.kar.nic.in/html/ntsenmms.htl )  ವೆಬ್‌ಸೈಟ್‌ನಲ್ಲೂ ಲಭ್ಯ.

ಪ್ರತಿವರ್ಷ ನಡೆಯುವ ಈ ಪರೀಕ್ಷೆಗಳೇ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬುನಾದಿ. ಇದು ಮಕ್ಕಳಿಗೆ ವ್ಯಾವಹಾರಿಕ ಜಗತ್ತಿನ ತೀವ್ರ ಸ್ಪರ್ಧೆಯ ಪರಿಚಯ ನೀಡುತ್ತದೆ.

 ಪರೀಕ್ಷೆಗಳಿಗಿರುವ ವ್ಯತ್ಯಾಸಗಳು


 ಎನ್.ಟಿ.ಎಸ್.ಸಿ.
10ನೇ ತರಗತಿ ವಿದ್ಯಾರ್ಥಿಗಳಿಗೆ

1000 ವಿದ್ಯಾರ್ಥಿ ವೇತನ (ರಾಷ್ಟ್ರದಾದ್ಯಂತ)

ಕರ್ನಾಟಕಕ್ಕೆ 225 ವಿದ್ಯಾರ್ಥಿವೇತನ

ಮೂರು ಹಂತಗಳ ಆಯ್ಕೆ 
   (ರಾಜ್ಯ ಹಂತ,ರಾಷ್ಟ್ರ ಹಂತ ಮತ್ತು ಸಂದರ್ಶನ)

ರಾಜ್ಯಮಟ್ಟದಲ್ಲಿ ಗಳಿಸಿದ ಅಂಕಗಳನ್ನು
   ಆಧರಿಸಿ ಆಯ್ಕೆ ಪಟ್ಟಿ (ರ‌್ಯಾಂಕ್)
   ಪ್ರಕಟಿಸಲಾಗುವುದು

ಪೋಷಕರ ವರಮಾನ ಮಿತಿ ಇಲ್ಲ

ಎನ್‌ಸಿಇಆರ್‌ಟಿ ವಿದ್ಯಾರ್ಥಿ ವೇತನ ನೀಡುತ್ತದೆ

ಎನ್.ಎಂ.ಎಂ.ಎಸ್.
8ನೇ ತರಗತಿ ವಿದ್ಯಾರ್ಥಿಗಳಿಗೆ

1,00,000 ವಿದ್ಯಾರ್ಥಿ ವೇತನ (ರಾಷ್ಟ್ರದಾದ್ಯಂತ)

ಕರ್ನಾಟಕಕ್ಕೆ 5534 ವಿದ್ಯಾರ್ಥಿ ವೇತನ

ಒಂದು ಹಂತದ ಆಯ್ಕೆ  (ರಾಜ್ಯಮಟ್ಟದಪರೀಕ್ಷೆ)

ಪ್ರತಿ ಜಿಲ್ಲಾವಾರು ಗಳಿಸಿದ ಅಂಕಗಳ
   ಆಧಾರದ ಮೇಲೆ ಆಯ್ಕೆ ಪಟ್ಟಿ (ರ‌್ಯಾಂಕ್)
   ಪ್ರಕಟಣೆ

ಪೋಷಕರ ವರಮಾನ ವಾರ್ಷಿಕ 1.5 ಲಕ್ಷ ರೂ
   ಮೀರರಬಾರದು

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
   ಎಸ್.ಬಿ.ಐ.ಗಳ ಮೂಲಕ ಚೆಕ್ ವಿತರಿಸುತ್ತದೆ
http://prajavani.net/include/story.php?news=9923&section=129&menuid=13