Monday, August 13, 2012

NTSE and NMMS Examinations 2012 in Prajavani 13 Aug 12

 http://prajavaniepaper.com/svww_index1.php
Article on NTSE and NMMS Examinations 2012 in Prajavani 13 Aug 12

ಪ್ರತಿಭಾ ವೇತನ ಪರೀಕ್ಷೆಗೆ ಸಿದ್ಧರಾಗಿ ಮಕ್ಕಳೇ...

  • August 13, 2012


10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ (ಎನ್‌ಟಿಎಸ್‌ಇ) ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾ ಶಿಷ್ಯವೇತನ (ಎನ್‌ಎಂಎಂಎಸ್) ಪರೀಕ್ಷೆಗಳು ಮತ್ತೆ ಬಂದಿವೆ.

 ಕರ್ನಾಟಕಕ್ಕೆ ಎನ್‌ಎಂಎಂಎಸ್ ಅಡಿಯಲ್ಲಿ 5,534 ವಿದ್ಯಾರ್ಥಿ ವೇತನಗಳು ಮೀಸಲಾಗಿದ್ದರೂ ಪ್ರತಿ ವರ್ಷ 2-3 ಸಾವಿರ ಮಕ್ಕಳು ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಈ ಪರೀಕ್ಷೆ ತೆಗೆದುಕೊಳ್ಳುತ್ತಿರುವುದು ಇದಕ್ಕೆ ಕಾರಣ. ಆದ್ದರಿಂದ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಪ್ರತಿ ಶಾಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಮಾಡಲು ಸರ್ಕಾರ ಬಿಇಒಗಳಿಗೆ ಸೂಚಿಸಿದೆ. 

ಅದರಲ್ಲೂ ಹಿಂದುಳಿದ ತಾಲ್ಲೂಕುಗಳು ಮತ್ತು ಎನ್‌ಪಿಇಜಿಇಎಲ್ ಯೋಜನೆಯ ಅನ್ವಯ ಹೆಣ್ಣುಮಕ್ಕಳಿಗೆ ವಿಶೇಷ ಶಿಕ್ಷಣ ನೀಡುತ್ತಿರುವ ಬ್ಲಾಕ್‌ಗಳಲ್ಲಿ ಎನ್‌ಎಂಎಂಎಸ್ ಪರೀಕ್ಷೆಗಾಗಿಯೇ ಪ್ರತ್ಯೇಕ ತರಬೇತಿ, ವಿಶೇಷ ತರಗತಿ ನಡೆಸಲು ಆದೇಶಿಸಿದೆ.

ಅರ್ಜಿ ನಮೂನೆಗಳು www.dsert.kar.nic.in ವೆಬ್‌ಸೈಟ್‌ನಲ್ಲೂ ಲಭ್ಯ. ಭರ್ತಿ ಮಾಡಿದ ಅರ್ಜಿಗಳನ್ನು ಆ. 31ರ ಒಳಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಎರಡೂ ಪರೀಕ್ಷೆ ನವೆಂಬರ್ 18ರಂದು ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿವೆ.

ಪರೀಕ್ಷಾ ಶುಲ್ಕ: ಎನ್‌ಟಿಎಸ್‌ಇ ಪರೀಕ್ಷೆಗಾಗಿ ಸಾಮಾನ್ಯ ಮತ್ತು ಇತರೆ ವರ್ಗದ ವಿದ್ಯಾರ್ಥಿಗಳಿಗೆ 100 ರೂ, ಪರಿಶಿಷ್ಟ ಜಾತಿ, ವರ್ಗಕ್ಕೆ 25 ರೂ ಶುಲ್ಕ.

ಎನ್‌ಎಂಎಂಎಸ್‌ಗೆ ಅರ್ಜಿ ಶುಲ್ಕ ಅಥವಾ ಪರೀಕ್ಷಾ ಶುಲ್ಕ ಇಲ್ಲ. 7ನೇ ತರಗತಿಯಲ್ಲಿ ಕನಿಷ್ಠ ಶೇ 55 ಅಂಕ ಗಳಿಸಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಪೋಷಕರ ವರಮಾನ 1.5 ಲಕ್ಷ ಮೀರಿರಬಾರದು.

ವಿದ್ಯಾರ್ಥಿ ವೇತನ
ಎನ್‌ಟಿಎಸ್‌ಇ ಪರೀಕ್ಷೆಯ ಪ್ರಥಮ ಹಂತದಲ್ಲಿ ಮಾತ್ರ ತೇರ್ಗಡೆಯಾಗಿ ದ್ವಿತೀಯ ಹಂತದಲ್ಲಿ ಆಯ್ಕೆಯಾಗದೇ ಇರುವವರಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಎರಡು ವರ್ಷ ತಿಂಗಳಿಗೆ ರೂ.200 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಎರಡನೇ ಹಂತ ಹಾಗೂ ಸಂದರ್ಶನ ಹಂತದಲ್ಲಿ ಆಯ್ಕೆಯಾದರೆ ಪದವಿ ಮತ್ತು ಸ್ನಾತಕೋತ್ತರ ಹಂತದ ವರೆಗೂ ತಿಂಗಳಿಗೆ 500 ರೂ ವಿದ್ಯಾರ್ಥಿ ವೇತನ ದೊರೆಯುತ್ತದೆ. 
ಎನ್‌ಎಂಎಂಎಸ್ ತೇರ್ಗಡೆಯಾದರೆ 9ನೇ ತರಗತಿಯಿಂದ ಪ್ರಾರಂಭಿಸಿ ದ್ವಿತೀಯ ಪಿಯು ವರೆಗೂ ತಿಂಗಳಿಗೆ 500 ರೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಹೀಗಿರುತ್ತದೆ ಪ್ರಶ್ನೆಪತ್ರಿಕೆ
ಎನ್‌ಎಂಎಂಎಸ್‌ನ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯಲ್ಲಿ 90 ಅಂಕಗಳ 90 ಕಡ್ಡಾಯ ಪ್ರಶ್ನೆಗಳಿದ್ದು 90 ನಿಮಿಷ ಕಾಲಾವಕಾಶ ಇರುತ್ತದೆ. ಇದರಲ್ಲಿ ಸಾಮಾನ್ಯ ಗಣಿತ, ದಿಕ್ಕುಗಳನ್ನು ಗುರುತಿಸುವುದು, ರಕ್ತಸಂಬಂಧಗಳನ್ನು ಹುಡುಕುವುದು, ಬಿಟ್ಟ ಸಂಖ್ಯಾಸರಣಿ, ಅಕ್ಷರ ಸರಣಿಯನ್ನು ಪೂರ್ಣಗೊಳಿಸುವುದು, ತರ್ಕದ ಆಧಾರದಿಂದ ಲೆಕ್ಕ ಬಿಡಿಸುವುದು ಹೀಗೆ ಹಲವು ಬೌದ್ಧಿಕ ಕಸರತ್ತಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ.    
       
ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಯಲ್ಲೂ 90 ಅಂಕಗಳ 90 ಕಡ್ಡಾಯ ಪ್ರಶ್ನೆಗಳನ್ನು 90 ನಿಮಿಷಗಳಲ್ಲಿ ಉತ್ತರಿಸಬೇಕು. ಇದರಲ್ಲಿ ಇತಿಹಾಸ, ಭೂಗೋಳ, ಪೌರನೀತಿ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದು, 7ನೇ ತರಗತಿಯ ಪೂರ್ಣ ಹಾಗೂ 8 ನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆ ವರೆಗಿನ ಪಠ್ಯವಸ್ತು ನಿಗದಿಯಾಗಿರುತ್ತದೆ.

ಅರ್ಹತೆ ಗಳಿಸಿಕೊಳ್ಳಲು ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಮಕ್ಕಳು ಕನಿಷ್ಠ ಶೇ 40, ಪರಿಶಿಷ್ಟ ವಿದ್ಯಾರ್ಥಿಗಳು ಶೇ 32 ಅಂಕ ಪಡೆಯಬೇಕು. 

ಎನ್‌ಟಿಎಸ್‌ಸಿಗೆ 8-9ನೇ ತರಗತಿಯ ಪೂರ್ಣ ಹಾಗೂ 10ನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆ ವರೆಗಿನ ಪಠ್ಯವಸ್ತುವಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪ್ರಶ್ನೆಗೆ ನಾಲ್ಕು ಸಂಭಾವ್ಯ ಉತ್ತರಗಳಿದ್ದು ಅದರಲ್ಲಿ ಒಂದು ಸರಿ ಉತ್ತರವನ್ನು ಒಎಂಆರ್ ಷೀಟ್‌ನಲ್ಲಿಯೇ ನೀಲಿ ಅಥವಾ ಕಪ್ಪು ಬಾಲ್‌ಪಾಯಿಂಟ್ ಪೆನ್ನಿನಿಂದ ಸರಿಯಾಗಿ ತುಂಬಿಸಬೇಕು. 

ಪರೀಕ್ಷಾ ಕೈಪಿಡಿ
ಕರ್ನಾಟಕ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು (ಡಿಎಸ್‌ಇಆರ್‌ಟಿ) ಈ ಎರಡೂ ಪರೀಕ್ಷಾರ್ಥಿಗಳ ಅನುಕೂಲಕ್ಕೆ ವಿಶೇಷ ಮಾಹಿತಿ ಪುಸ್ತಕವನ್ನು ಕಳೆದ ವರ್ಷವೇ ಬಿಡುಗಡೆ ಮಾಡಿತ್ತು. ಇದು ಡಿಎಸ್‌ಇಆರ್‌ಟಿ (http://dsert.kar.nic.in/html/ntsenmms.htl )  ವೆಬ್‌ಸೈಟ್‌ನಲ್ಲೂ ಲಭ್ಯ.

ಪ್ರತಿವರ್ಷ ನಡೆಯುವ ಈ ಪರೀಕ್ಷೆಗಳೇ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬುನಾದಿ. ಇದು ಮಕ್ಕಳಿಗೆ ವ್ಯಾವಹಾರಿಕ ಜಗತ್ತಿನ ತೀವ್ರ ಸ್ಪರ್ಧೆಯ ಪರಿಚಯ ನೀಡುತ್ತದೆ.

 ಪರೀಕ್ಷೆಗಳಿಗಿರುವ ವ್ಯತ್ಯಾಸಗಳು


 ಎನ್.ಟಿ.ಎಸ್.ಸಿ.
10ನೇ ತರಗತಿ ವಿದ್ಯಾರ್ಥಿಗಳಿಗೆ

1000 ವಿದ್ಯಾರ್ಥಿ ವೇತನ (ರಾಷ್ಟ್ರದಾದ್ಯಂತ)

ಕರ್ನಾಟಕಕ್ಕೆ 225 ವಿದ್ಯಾರ್ಥಿವೇತನ

ಮೂರು ಹಂತಗಳ ಆಯ್ಕೆ 
   (ರಾಜ್ಯ ಹಂತ,ರಾಷ್ಟ್ರ ಹಂತ ಮತ್ತು ಸಂದರ್ಶನ)

ರಾಜ್ಯಮಟ್ಟದಲ್ಲಿ ಗಳಿಸಿದ ಅಂಕಗಳನ್ನು
   ಆಧರಿಸಿ ಆಯ್ಕೆ ಪಟ್ಟಿ (ರ‌್ಯಾಂಕ್)
   ಪ್ರಕಟಿಸಲಾಗುವುದು

ಪೋಷಕರ ವರಮಾನ ಮಿತಿ ಇಲ್ಲ

ಎನ್‌ಸಿಇಆರ್‌ಟಿ ವಿದ್ಯಾರ್ಥಿ ವೇತನ ನೀಡುತ್ತದೆ

ಎನ್.ಎಂ.ಎಂ.ಎಸ್.
8ನೇ ತರಗತಿ ವಿದ್ಯಾರ್ಥಿಗಳಿಗೆ

1,00,000 ವಿದ್ಯಾರ್ಥಿ ವೇತನ (ರಾಷ್ಟ್ರದಾದ್ಯಂತ)

ಕರ್ನಾಟಕಕ್ಕೆ 5534 ವಿದ್ಯಾರ್ಥಿ ವೇತನ

ಒಂದು ಹಂತದ ಆಯ್ಕೆ  (ರಾಜ್ಯಮಟ್ಟದಪರೀಕ್ಷೆ)

ಪ್ರತಿ ಜಿಲ್ಲಾವಾರು ಗಳಿಸಿದ ಅಂಕಗಳ
   ಆಧಾರದ ಮೇಲೆ ಆಯ್ಕೆ ಪಟ್ಟಿ (ರ‌್ಯಾಂಕ್)
   ಪ್ರಕಟಣೆ

ಪೋಷಕರ ವರಮಾನ ವಾರ್ಷಿಕ 1.5 ಲಕ್ಷ ರೂ
   ಮೀರರಬಾರದು

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
   ಎಸ್.ಬಿ.ಐ.ಗಳ ಮೂಲಕ ಚೆಕ್ ವಿತರಿಸುತ್ತದೆ
http://prajavani.net/include/story.php?news=9923&section=129&menuid=13

No comments: